ಶರತ್ಕಾಲದ ಚಂದ್ರಮ

ಶರತ್ಕಾಲದ ಚಂದ್ರಮ

‘ಶರತ್ಕಾಲ ಚಂದ್ರಮನಂತೆ ನೂರ್ಕಾಲಬಾಳಿ ಬೆಳಗು!’ ಇದು ಹಿರಿಯರು ಪೊಡಮಡಿದ ಚಿಣ್ಣರಿಗೆ ಮಾಡುವ ಶುಭಾಶೀರ್ವಾದ. ಶರತ್ಕಾಲದಲ್ಲಿ ಚಂದ್ರ ಭೂಮಿಗೆ ಅತೀ ಹತ್ತಿರ. ಹುಣ್ಣಿಮೆ ದಿನವಂತೂ ದೊಡ್ಡದಾಗಿ ಕೈಗೆ ಸಿಗುವಂತೆ ಕಾಣುವ ಈ ಚಂದಿರ, ಮಳೆಗಾಲ ಪೂರ್ತಿ ಮೋಡ ಮುಸುಕಿ ಕವಿದ ಕತ್ತಲೆಯಿಂದ ಹೊರಬರುವ ಈ ಕಾಲ ನಿಜಕ್ಕೂ ಅಪ್ಯಾಯಮಾನವಾದದ್ದು. ನದಿ ಕೆರೆಗಳ ಮಣ್ಣು ಕರಡಿದ ನೀರು ತಿಳಿಯಾಗಿ ಶುಭ್ರವಾದ ಜಲ ಎಲ್ಲೆಡೆ ಕಾಣಸಿಗುವುದು. ತಿಳಿ ನೀಲಿಯಾದ ಆಕಾಶ, ಪ್ರಕಾಶಮಾನವಾದ ಸೂರ್ಯನ ಬೆಳಕು ಎಲ್ಲೆಡೆ ಪ್ರಸನ್ನತೆಯನ್ನುಂಟುಮಾಡುವುದು.

ಹಂಸೋದಕ!

 ” ತಪ್ತಂ ತಪ್ತಾಂಶುಕಿರಣೈಃ ಶೀತಂ ಶೀತಾಂಶುರಶ್ಮಿಭಿಃ ॥೫೧॥
 ಸಮಂತಾದಪ್ಯಹೋರಾತ್ರಮಗಸ್ತ್ಯೋದಯನಿರ್ದಿಷಮ್।
 ಶುಚಿ ಹಂಸೋದಕಂ ನಾಮ ನಿರ್ಮಲಂ ಮಲಜಿಜ್ಜಲಂ ॥೫೨॥
 ನಾಭಿಷ್ಯಂದಿ ನ ವಾ ರೂಕ್ಷಂ ಪಾನಾದಿಷ್ಟಮೃತೋಪಮಮ್ ॥” (ಅ. ಹೃ. ಸೂ..)
ಹಗಲಿಡೀ ಪ್ರಖರ ಸೂರ್ಯನ ಕಿರಣಗಳಿಂದ ಕುದಿದು, ರಾತ್ರಿ ತಂಪಾದ ಚಂದ್ರನ ಕಿರಣಗಳಿಂದ ತಂಪಾಗಿ ಉದಿತ ಅಗಸ್ತ್ಯ ನಕ್ಷತ್ರದ ದೃಷ್ಟಿಯಿಂದ ನಿರ್ವಿಷವಾದ ಈ ಶರದ್ ಋತುವಿನ  “ದೋಷಹರ” ವಾದ ನೀರಿಗೆ ”ಹಂಸೋದಕ” ವೆಂದು ಹೆಸರು. ಅಭಿಷ್ಯಂದಿಕರವಲ್ಲದ, ಒಣಗಿಸದ ಈ ನೀರು ಕುಡಿಯಲು ಅಮೃತಕ್ಕೆ ಸಮಾನವಾದದ್ದು.

ಪಿತ್ತ ಹೆಚ್ಚಾಗುವ ಕಾಲ!

 ಮಳೆಗಾಲದಲ್ಲಿ ವಾತಾವರಣದ ಹುಳಿಯಿಂದಾಗಿ ಸಂಚಿತವಾದ ಪಿತ್ತ ಈ ಋತುವಿನಲ್ಲಿ ಒಮ್ಮೆಲೇ ಬಿಸಿಲಿನ ಝಳಕ್ಕೆ ಕರಗಿ ಕೆರಳುತ್ತದೆ. ಪಿತ್ತ ಪ್ರಧಾನವಾದ ರೋಗಗಳು ಈ ಋತಿವಿನಲ್ಲಿ ಸಹಜವಾಗಿ ಹೆಚ್ಚಾಗುತ್ತದೆ. ಜ್ವರ, ವಿಸರ್ಪ, ಅತಿಸಾರ, ಆಮ್ಲಪಿತ್ತ, ಚರ್ಮರೋಗ, ವಾತರಕ್ತಗಳು ಇಲ್ಲಿ ಹೆಚ್ಚು.

ಕಹಿತುಪ್ಪ, ವಿರೇಚನ

 * ಸಂಚಿತವಾದ ಪಿತ್ತವನ್ನು, ಗೆಲ್ಲಲು ಕಹಿತುಪ್ಪ ಸೇವಿಸಿ ಎಂಬುದು ಶಾಸ್ತ್ರದ ಅಂಬೋಣ. ಅಮೃತಬಌ, ಬೇವು, ಕಿರಾತಕಡ್ಡಿ, ಆಡುಸೋಗೆ, ಕೊಡಸ, ಈಶ್ವರೀ ಬಌ, ನೆಲನೆಲ್ಲಿ, ಜೇಕಿನಗಡ್ಡೆ, ಸೊಗದೇ ಬೇರು ಮುಂತಾದ ಔಷಧಗಳ ಕಷಾಯ / ಕಲ್ಕಗಳೊಂದಿಗೆ ಶಾಸ್ತ್ರೋಕ್ತ ವಿಧಾನದಿಂದ ಕುದಿಸಿ ಸಂಸ್ಕರಿಸಿ ತಯಾರಿಸಿದ ಆಕಳ ತುಪ್ಪಕ್ಕೆ ಕಹಿತುಪ್ಪ / ತಿಕ್ತಕ ಘೃತವೆನ್ನುತ್ತಾರೆ. ರಕ್ತ ದೋಷವನ್ನು ಗೆಲ್ಲಲು ಅತ್ಯುತ್ತಮವಾದ ಈ ತುಪ್ಪವನ್ನು ವಾಗ್ಭಟರು ಆರೋಗ್ಯವಂತನಿಗೂ ಸೇವಿಸಲು ಹೇಳಿದ್ದಾರೆ.
* ಈ ಋತುವಿನಲ್ಲಿ ಒಮ್ಮೆ ‘ಭೇದಿ’ಗೆ ಹರಳೆಣ್ಣೆ / ತಿವೃತ ಲೇಹ್ಯ / ಅಳಲೇಕಾಯಿ ಇವುಗಳಲ್ಲೊಂದನ್ನು ವೈದ್ಯರ ಮಾರ್ಗದರ್ಶನದಲ್ಲಿ ಸಕ್ಕರೆ/ಬೆಲ್ಲ/ಹಾಲಿನೊಂದಿಗೆ ಸೇವಿಸಿದರೆ ದೇಹಶುದ್ಧಿಯಾಗಿ ಪಿತ್ತಜನ್ಯವಾದ ತೊಂದರೆಗಳು ವರ್ಷಪೂರ್ತಿ ಇಲ್ಲವಾಗುವುದು.
* ರಕ್ತ ಕೆಟ್ಟು ಬಂದ ಖಾಯಿಲೆಗಳಿಂದ ವಾತರಕ್ತ, ರಕ್ತ ಪಿತ್ತ, ಚರ್ಮರೋಗ ಮುಂತಾದುವುಗಳಲ್ಲಿ ‘ರಕ್ತಮೋಕ್ಷಣ’ ಚಿಕಿತ್ಸೆಗೂ ಇದು ಸಕಾಲವಾಗಿದೆ. ಜಿಗಣೆ ಕಚ್ಚಿಸಿ ಕೆಟ್ಟ ರಕ್ತ ತೆಗೆಯುವ ಜಲೌಕಾವಚರಣಕ್ಕೆ ಇದು ಉತ್ತಮ ಸಮಯ. ಇಡೀ ವರ್ಷದಲ್ಲಿ ರಕ್ತದಾನಕ್ಕೂ ಇದು ಸರಿಯಾದ ಸಮಯವಾಗಿದೆ.

ಬೇಕು-ಬೇಡಗಳಿವು!

* ಪಿತ್ತಕರವಾದ ಹುಳಿ-ಉಪ್ಪು ಖಾರಗಳೀಗ ಬೇಡ. ಕಹಿ-ಸಿಹಿ-ಒಗರು ಸೇವನೆಯನ್ನು ಮಾಡಬೇಕು.
* ಪಚನಕ್ಕೆ ಹಗುರವಾದ ಆಹಾರವಿರಲಿ.
* ಹೆಸರು, ಸಕ್ಕರೆ, ನೆಲ್ಲಿ,ಪಡವಲ, ಜೇನು ಇವು ಉತ್ತಮ ಆಹಾರಗಳು.
* ಹೀರೆ, ಕ್ಯಾರೆಟ್, ಕೋಸು, ಬೀಟ್ ರೂಟ್, ಒಣ ಪ್ರದೇಶದ ಮಾಂಸ – ಈ ಋತುವಿನಲ್ಲಿ ಸೇವಿಸಬಹುದು.
* ಮೀನು- ಚಿಕನ್ ಮುಂತಾದ ಉಷ್ಣ ಸ್ವಭಾವದ ಮಾಂಸ ಸೇವನೆ ಅಷ್ಟಾಗಿ ಒಳ್ಳೆಯದಲ್ಲ.
* ತೀಕ್ಷ್ಣ ಮದ್ಯ ಸೇವನೆ, ಉಪ್ಪಿನಕಾಯಿ,ಬಿಸಿಲಿನಲ್ಲಿ ಓಡಾಟ ಒಳ್ಳೆಯದಲ್ಲ.
* ದಾಳಿಂಬೆ, ಸೇಬು, ಸಪೋಟಾ, ಅಂಜೂರ, ಉತ್ತತ್ತಿ, ಖರ್ಜೂರ, ಮುಂತಾದ ಸಿಹಿ ಹಣ್ಣುಗಳು ಸೇವನೆಗೆ ಉತ್ತಮ. ಹುಳಿ ಹಣ್ಣುಗಳು ಬೇಡ.
* ವ್ಯಾಯಾಮ ಮಧ್ಯಮ ಪ್ರಮಾಣದಲ್ಲಿರಲಿ, ಹಗಲು ನಿದ್ರೆ ಬೇಡ, ಮೈಥುನ ವಾರದಲ್ಲಿ ೨ ದಿನಕ್ಕಿಂತ ಹೆಚ್ಚು ಬೇಡ. ಸ್ನಾನಕ್ಕೆ ತಣ್ಣೀರು/ ಉಗುರು ಬೆಚ್ಚಗಿನ ನೀರಿನ ಸೇವನೆ ಇರಲಿ.
* ಮನಸ್ಸು ಪ್ರಸನ್ನವಾಗಿದ್ದರೆ ಪಿತ್ತ ವೃದ್ಧಿಯಾಗದು. ಮಾನಸಿಕ ಏರುಪೇರುಗಳಿಗೆ ಅವಕಾಶ ಕೊಡದಿರಿ.

Article by GeneratePress

Lorem ipsum amet elit morbi dolor tortor. Vivamus eget mollis nostra ullam corper. Natoque tellus semper taciti nostra primis lectus donec tortor fusce morbi risus curae. Semper pharetra montes habitant congue integer nisi.

Leave a Comment