ಆರೋಗ್ಯ ಪ್ರಾಪ್ತಿಯ ಒಳಗುಟ್ಟು

health

ಆರೋಗ್ಯ ಪ್ರಾಪ್ತಿಯ  ಒಳಗುಟ್ಟು

ಮನುಷ್ಯ ಸುಖಿಯಾದರೆ ಮಾತ್ರ ಸಾಲದು. ಇತರರ ಹಿತೈಷಿಯೂ ಆಗಬೇಕು. ಆರೋಗ್ಯ ಪ್ರಾಪ್ತಿಯ ನಿಯಮಗಳನ್ನು ನಿಯಮಿತವಾಗಿ ತನ್ನ ಜೀವನದಲ್ಲಿ ಅಳವಡಿಸುವುದರಿಂದ ತಾನು ಸುಖಿಯಾಗಬಲ್ಲ. ಆದರೆ, ತನ್ನಿಂದಾಗಿ ತನ್ನ ಬಂಧು ಬಳಗ, ಮಿತ್ರರು, ಗ್ರಾಮ-ನಗರ, ರಾಜ್ಯ, ದೇಶಗಳ ಹಿತಕ್ಕಾಗಿಯೂ ಪ್ರಯತ್ನ ಪಡಬೇಕು. ಹೀಗೆ ಸುಖಿಯೂ, ಹಿತೈಷಿಯೂ ಆದ ಮನುಷ್ಯ ಇಹಪರಗಳ ಹಿತಕ್ಕಾಗಿ ತನ್ನ ಬದುಕನ್ನು ಸರಿಯಾಗಿ ನಡೆಸಿದಂತಾಗುತ್ತದೆ. ಹೀಗೆ ಬದುಕುವ ಒಳಗುಟ್ಟನ್ನೇ ಆಯುರ್ವೇದ ಜಗತ್ತಿನ ಒಳಿತಿಗಾಗಿ ತೆರೆದಿಡುತ್ತದೆ.

  ” ಹಿತಾಹಿತಂ ಸುಖಂ ದುಃಖಂ ಆಯುಸ್ತಸ್ಯ ಹಿತಾಹಿತಂ।
   ಮಾನಂ ಚ ತಚ್ಚಯತ್ರೋಕ್ತಂ ಆಯುರ್ವೇದಃ ಸ ಉಚ್ಯತೇ ॥” (ಚರಕ ಸೂತ್ರ-೧)
   ಹೀಗೆ ವ್ಯಕ್ತಿಯ ಜೀವನವನ್ನು  ಸಾರ್ಥಕತೆಯತ್ತ ಕೊಂಡೊಯ್ಯುವ  ಈ ತಂತ್ರದ ಸಾರವನ್ನು ಈ ಕೆಳಗಿನ ಸೂತ್ರದಲ್ಲಿ ಕಾಣಬಹುದಾಗಿದೆ.
  ” ನಿತ್ಯಂ ಹಿತಾಹಾರವಿಹಾರಸೇವೀ ಸಮಿಕ್ಷ್ಯಕಾರೀ ವಿಷಯೇಷ್ಷಸಕ್ತಃ।
   ದಾತಾ ಸಮಃ ಸತ್ಯಪರಃ ಕ್ಷಮಾವಾನ್ ಆಪ್ತೋಪಸೇವೀ ಚ ಭವತ್ಯ ರೋಗಃ ॥” 
                                                                                               (ಆ. ಹೃ.ಸೂ-೨)

೧. ನಿತ್ಯ ಹಿತಾಹಾರ ಸೇವೀ:

  • ಹಳಸಿದ, ತಣ್ಣಗಾದ, ಹಿಂದಿನ ದಿನದ ಆಹಾರ, ಕರಿದ ತಿಂಡಿ, ವಿರುದ್ಧ ಸ್ವಭಾವದ ಆಹಾರ ಮುಂತಾದವುಗಳು ‘ಅಹಿತ’ ಆಹಾರಗಳೆನ್ನಬಹುದು.
  • ಬಿಸಿ ಬಿಸಿಯಾದ ಮನೆಯೂಟ, ತಲೆತಲಾಂತರಗಳಿಂದ ಅಭ್ಯಾಸವಿರುವ ಆಹಾರದ ಸೇವನೆ ಮಿತವಾದ ಪ್ರಮಾಣದಲ್ಲಿ ಮಾಡುವುದು ‘ಹಿತಾಹಾರ’ವೆನ್ನಬಹುದು.
  • ಇಂತಹ ಆಹಾರವನ್ನು ಹಸಿವೆಯಿದ್ದಷ್ಟೇ ಸಕಾಲದಲ್ಲಿ ಸೇವಿಸುವುದರಿಂದ ಅದು ಯಾವುದೇ ರೋಗಕ್ಕೆ ಕಾರಣವಾಗದು.

 ೨. ನಿತ್ಯ ಹಿತವಿಹಾರ ಸೇವೀ:

  • ಪ್ರತಿನಿತ್ಯ ಪ್ರಾತಃಕಾಲದಲ್ಲಿ ಸೂರ್ಯೋದಯಕ್ಕೆ ಮೊದಲೇ ಏಳುವುದು.
  • ನಿತ್ಯ ಅಭ್ಯಂಗ, ಕರ್ಣಪೂರಣ , ನಸ್ಯ, ಗಂಡೂಷ, ವ್ಯಾಯಾಮ ವಿದ್ವರ್ತನ, ಸ್ನಾನಗಳನ್ನು ಸಕಾಲದಲ್ಲಿ ಮಾಡುವುದು.
  • ಪ್ರಯಾಣದಲ್ಲಿ ಸರಿಯಾದ ನಿಯಮಗಳ ಪಾಲನೆ.
  • ಮಲ, ಮೂತ್ರ, ಹಸಿವು, ನೀರಡಿಕೆ, ನಿದ್ರೆಯ ಸಹಜ ಪ್ರವೃತ್ತಿಗಳನ್ನು ತಡೆಯದಿರುವುದು.

ಇವುಗಳನ್ನು ಸರಿಯಾಗಿ ಪಾಲಿಸುವುದರಿಂದ ಆರೋಗ್ಯ ಪಾಲನೆ ಸರಿಯಾಗಿ ಉಂಟಾಗುತ್ತದೆ. ‘ನಿತ್ಯ ಹಿತಾಹಾರ ವಿಹಾರ ಸೇವೀ’ ಈ ಸೂತ್ರದ ಸರಿಯಾದ ಪಾಲನೆಯಿಂದ ‘ಶರೀರ’ ಮತ್ತು ‘ಇಂದ್ರಿಯ’ಗಳ ಸ್ವಾಸ್ಥ್ಯಕ್ಕೆ ಕಾರಣವಾಗುತ್ತದೆ.

೩. ಸಮೀಕ್ಷ್ಯಕಾರೀ:

ಯಾವುದೇ ಕೆಲಸವನ್ನು ಆರಂಭಿಸುವಾಗ ಚೆನ್ನಾಗಿ ವಿವೇಚನೆ ಮಾಡಿ, ವಿಷಯವನ್ನು ಚೆನ್ನಾಗಿ ಅರಿತು ‘ಭದ್ರ’ವಾಗಿ ಕೆಲಸ ಮಾಡುವವನು ಈ ಕಾರಣವಾಗಿ ತೊಂದರೆಗೀಡಾಗಲಾರ.

೪.ವಿಷಯೇಷ್ವಸಕ್ತಃ :

ಇಂದ್ರಿಯ ವಿಷಯಗಳಲ್ಲಿ ಅತಿಯಾದ ಆಸಕ್ತಿ ತೋರದೇ ಅವುಗಳನ್ನು ಸೇವಿಸಬೇಕು. ರಂಗುರಂಗಿನ ಜಗತ್ತಿನಲ್ಲಿ  ಇಂದ್ರಿಯಗಳು ನಮ್ಮನ್ನು ಎಲ್ಲೆಡೆಗೆ ಸೆಳೆಯುತ್ತವೆ.ಪತ್ರಿಕೆಯ ಪುಟಗಳಲ್ಲಿ, ಟಿ. ವಿ ಧಾರವಾಹಿಗಳಲ್ಲಿ ಕಣ್ಣು, ಕಿವಿ, ಮನಸ್ಸುಗಳನ್ನು ಕೊಡುವುದು, ಜಗಮಗಿಸುವ ಹೋಟೆಲುಗಳಲ್ಲಿ ರುಚಿ, ರುಚಿಯ ತಿಂಡಿಗಳಲ್ಲಿ ಮನವಿಟ್ಟು ಹೊಟ್ಟೆ ಭಾರವಾಗಿಸಿಕೊಳ್ಳುವುದು ಇತ್ಯಾದಿಗಳಿಂದ ಜೀವನದ ಉದ್ದೇಶವನ್ನೇ ಮೈ ಮರೆಯುತ್ತೇವೆ. ಹಾಗಾಗದಂತೆ ತನ್ನ ಉದ್ದೇಶದ ಕಡೆಗೆ ಲಕ್ಷ್ಯವಿರಿಸಿ, ಆಸಕ್ತನಾಗಿ ವಿಷಯಗಳನ್ನು ಸೇವಿಸಿದಾಗ ಅದು ಅರೋಗ್ಯಕ್ಕೆ ಕಾರಣವಾಗುತ್ತದೆ.ಈ ಎರಡನೇ ಪಾದದ ಅರ್ಥವನ್ನು ಅನುಸರಿಸಿದಾಗ ‘ಶರೀರ’ದ ಆರೋಗ್ಯವೂ ಸಹ ಉಂಟಾಗುತ್ತದೆ.

೫. ದಾತಾ:

ಇತರರಿಗೆ ಕೊಟ್ಟಿದ್ದು ಹತ್ತಾಗಿ, ನೂರಾಗಿ ನಮಗೆ ಹಿಂತಿರುಗುತ್ತವೆ ಎಂಬುದು ಹಿರಿಯರ ಮಾತು. ‘ತ್ಯಾಗ’ವೊಂದರಿಂದಲೇ ನಿಜವಾದ ಅಮೃತತ್ವದ ಪ್ರಾಪ್ತಿ ಎಂಬುದು ಋಷಿಗಳ ಅಂಬೋಣ. ಈ ದಾನವೆಂಬುದು ಸತ್ಪಾತ್ರರಿಗೆ ಮಾತ್ರ ಮಾಡಬೇಕು. ಕೇವಲ ‘ಹಣವೊಂದನ್ನೇ ‘ದಾನ’ ಮಾಡಬೇಕೆಂದಿಲ್ಲ. ‘ದ್ರವ್ಯ’ ದಾನ  ‘ಜ್ಞಾನ’ ದಾನ, ಸಕಾಲದಲ್ಲಿ ಮಾಡುವ ಯಾವುದೇ ರೀತಿಯ ಸಹಾಯವೂ ದಾನವೇ ಸರಿ.

೬.ಸಮಃ

ಯಾವುದೇ ಭೇದವಿಲ್ಲದೇ ಎಲ್ಲರನ್ನೂ ‘ಸಮಭಾವ’ದಿಂದ ನೋಡುವುದೇ ‘ಸಮತ್ವ’. ಯಾವುದೇ ಪಕ್ಷವಹಿಸದೇ ನಿತ್ಯವೂ ರಾಗದ್ವೇಷ, ಕಾಮ, ಕ್ರೋಧ, ಮದ, ಮಾತ್ಸರ್ಯಗಳಿಗೆ ಎಡೆಕೊಡದೆ ಮನಸ್ಸನ್ನು ಸದಾ ಸಮಭಾವದಲ್ಲಿಟ್ಟುಕೊಳ್ಳುವುದು.

೭.ಸತ್ಯಪರಃ :

ಸತ್ಯದ ಪಕ್ಷದಲ್ಲಿ ಸದಾ ಇರುವುದು  ಸರ್ವದಾ ಕ್ಷೇಮಕರ. ತಾತ್ಕಾಲಿಕವಾಗಿ ಕೆಲವೊಮ್ಮೆ  ಇರುಸು ಮುರುಸು ಉಂಟಾದರೂ ಸತ್ಯಪರತೆ ಆತ್ಯಂತಿಕವಾಗಿ ಎಂದಿಗೂ ಶ್ರೇಯಸ್ಸನ್ನೇ ಉಂಟುಮಾಡುವುದರಲ್ಲಿ ಸಂಶಯವಿಲ್ಲ. ಸತ್ಯವನ್ನು ನುಡಿಯುವುದರಲ್ಲಿ  ‘ಸಂಯಮ’ ಸಾಧಿಸಿದವನ ಮಾತು ಒಂದೊಮ್ಮೆ ತಿಳಿಯದೆ ತಪ್ಪಾಗಿ ನುಡಿದರೂ ಅದು ಸಿದ್ಧವಾಗುತ್ತದೆ. ಮಾತಿನಲ್ಲಿ  ನಿಯಂತ್ರಣವಿದ್ದವನು ಯಾವತ್ತು ತೊಂದರೆಗೊಳಗಾಗಲಾರ.

೮. ಕ್ಷಮಾವಾನ್:

ಎಲ್ಲರನ್ನೂ, ತನ್ನನ್ನೂ ಕ್ಷಮಿಸಬೇಕು. ಕ್ಷಮೆ ‘ಕ್ರೋಧ’ವೆಂಬ ‘ಸರ್ಪ’ವನ್ನು ತಣ್ಣಗಾಗಿಸುತ್ತದೆ.ಯಾವುದೇ ವ್ಯಕ್ತಿಯಿಂದ ತನಗಾದ ಅಪಮಾನವನ್ನು ನುಂಗದೇ ನೆನಪಿಟ್ಟುಕೊಂಡರೆ ಅದು ತನ್ನನ್ನೇ ದಹಿಸುವುದರಲ್ಲಿ ಸಂದೇಹವಿಲ್ಲ. To err is human, To forgive is divine ಎಂಬುದು ಮುತ್ತಿನಂಥ ಮಾತು.

೯. ಅಪ್ತೋಪಸೇವೀ:

ಗುರುಗಳ,ಹಿರಿಯರ, ಶಾಸ್ತ್ರಗ್ರಂಥಗಳ ಮಾತನ್ನು ತಿಳಿದು ಜೀವನದಲ್ಲಿ ಅಳವಡಿಸುವವನಿಗೆ ತನ್ನ ಎಲ್ಲಾ ಸಂದೇಹಗಳಿಗೂ  ಸರಿಯಾದ ನುರಿತ ಮಾರ್ಗದರ್ಶನ ಸಿಗುವ ಕಾರಣ ಆತನೆಂದೂ ತಪ್ಪು ಮಾಡಿ ತೊಂದರೆಗೀಡಾಗಲಾರ.
ಈ ಒಂಭತ್ತು ಸೂತ್ರಗಳಲ್ಲಿ ಮೂರನೆಯ, ನಾಲ್ಕನೆಯ ಸಾಲಿನ ಸೂತ್ರಗಳು ವಿಶೇಷವಾಗಿ ‘ಮನಸ್ಸು’ ಮತ್ತು ‘ಆತ್ಮ’ಗಳ ಶ್ರೇಯಸ್ಸಿಗೆ ವಿಶೇಷವಾಗಿ ಅಗತ್ಯ. ಈ ಸುವರ್ಣ ಸೂತ್ರಗಳನ್ನು ಪ್ರತಿನಿತ್ಯ ನಿಯಮದಿಂದ ಪಾಲಿಸಿದವನು ಎಂದಿಗೂ ರೋಗಕ್ಕೀಡಾಗಲಾರ ಎಂಬುದಂತೂ ಅನುಭೂತ ಸತ್ಯ.

Article by GeneratePress

Lorem ipsum amet elit morbi dolor tortor. Vivamus eget mollis nostra ullam corper. Natoque tellus semper taciti nostra primis lectus donec tortor fusce morbi risus curae. Semper pharetra montes habitant congue integer nisi.

Leave a Comment